News and Eventsನವರಾತ್ರಿಯ 9ನೇ ದಿನ - ಸಿದ್ಧಿದಾತ್ರಿ ದೇವಿ ಮಹತ್ವ

Ⓒ By, Nekarbandhu

ನವರಾತ್ರಿಯ 9ನೇ ದಿನ – ಸಿದ್ಧಿದಾತ್ರಿ ದೇವಿ ಮಹತ್ವ

ನವರಾತ್ರಿ 2022 ರ 9 ನೇ ದಿನದ ಪೂಜೆಯನ್ನು ಅಕ್ಟೋಬರ್‌ 4 ರಂದು ಮಂಗಳವಾರ ಆಚರಿಸಲಾಗುವುದು. ನವರಾತ್ರಿ ಹಬ್ಬದ 9ನೇ ದಿನವನ್ನೇ ಮಹಾನವಮಿ ಎಂದು ಆಚರಿಸಲಾಗುತ್ತದೆ. ಈ ದಿನ ನವದುರ್ಗೆಯ ಒಂಭತ್ತನೇ ಅಥವಾ ಕೊನೆಯ ರೂಪವಾದ ಸಿದ್ಧಿದಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ತಾಯಿ ಸಿದ್ಧಿಧಾತ್ರಿಯು ಪರಿಪೂರ್ಣತೆ, ಎಲ್ಲಾ ರೀತಿಯ ಶಕ್ತಿ, ವೈಭವ ಮತ್ತು ಮಹಿಮೆಯ ಮೂಲವಾಗಿದ್ದಾಳೆ. ಈ ದೇವಿಯು ತ್ರಿಮೂರ್ತಿ ದೇವರುಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಆಧ್ಯಾತ್ಮಿಕ ವೈಭವ ಹಾಗೂ ಪರಿಪೂರ್ಣತೆ ನೀಡುವಳು. ನವರಾತ್ರಿ ಒಂಭತ್ತನೇ ದಿನದಂದು ಸಿದ್ಧಿದಾತ್ರಿ ದೇವಿಯನ್ನು ಪೂಜಿಸುವುದು ಹೇಗೆ..? ಸಿದ್ಧಿದಾತ್ರಿ ದೇವಿಯನ್ನು ಪೂಜಿಸುವ ವಿಧಾನ, ಮಂತ್ರ, ಪ್ರಯೋಜನ ಮತ್ತು ಮಹತ್ವ ಹೀಗಿದೆ..!

ಶಾರದೀಯ ನವರಾತ್ರಿಯನ್ನು 9 ದಿನಗಳವರೆಗೆ ಆಚರಿಸಲಾಗುತ್ತದೆ. ಈ 9 ದಿನಗಳಲ್ಲೂ ದುರ್ಗಾ ದೇವಿಯ 9 ವಿವಿಧ ರೂಪಗಳನ್ನು ಪೂಜಿಸಲಾಗುತ್ತದೆ. ನವರಾತ್ರಿ ಹಬ್ಬದ 9 ದಿನದಂದು ಅಂದರೆ ನವರಾತ್ರಿಯ ಕೊನೆಯ ದಿನದಂದು ಭಕ್ತರು ದೇವಿ ದುರ್ಗೆಯ ಒಂಬತ್ತು ಅಭಿವ್ಯಕ್ತಿಗಳಲ್ಲಿ ಒಂದಾದ ಸಿದ್ಧಿದಾತ್ರಿ ದೇವಿಯನ್ನು ಪೂಜಿಸುತ್ತಾರೆ. ಈ ಬಾರಿ ನವರಾತ್ರಿ ಹಬ್ಬವು ಸೆಪ್ಟೆಂಬರ್‌ 26 ರಂದು ಆರಂಭವಾಗಿದ್ದು, 2022 ರ ಅಕ್ಟೋಬರ್‌ 5 ರಂದು ಮುಕ್ತಾಯಗೊಳ್ಳುವುದು. ನವರಾತ್ರಿ ಹಬ್ಬದ 9ನೇ ದಿನದಂದು ಸಿದ್ಧಿದಾತ್ರಿ ದೇವಿಯನ್ನು ಪೂಜಿಸುವುದು ಹೇಗೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ..

ದೇವಿ ಸಿದ್ಧಿದಾತ್ರಿ ಆಧ್ಯಾತ್ಮಿಕ ಆನಂದವನ್ನು ಹುಡುಕುವವರನ್ನು ಆಶೀರ್ವದಿಸುತ್ತಾಳೆ. ಮಾತೃದೇವತೆಯ ಈ ರೂಪವು ಬಲಗೈಯಲ್ಲಿ ಚಕ್ರವನ್ನು ಮತ್ತು ಗದೆಯನ್ನು ಹಾಗೂ ಎಡಗೈಯಲ್ಲಿ ಶಂಖವನ್ನು ಮತ್ತು ಕಮಲವನ್ನು ಹಿಡಿದುಕೊಂಡಿದ್ದಾಳೆ. ಸಂಪೂರ್ಣವಾಗಿ ಅರಳಿದ ಕಮಲದ ಮೇಲೆ ಕುಳಿತಿರುವ, ಮಾತೃ ದೇವಿಯ ಈ ಅವತಾರವನ್ನು ನಿರಾಕಾರ ಆದಿಶಕ್ತಿ ಎಂದು ಶ್ಲಾಘಿಸಲಾಗುತ್ತದೆ, ಈಕೆಯನ್ನು ಶಿವನು ಸಹ ಪೂಜಿಸುತ್ತಾನೆ.

ಸಿದ್ಧಿದಾತ್ರಿ ದೇವಿಯು ಕಮಲದ ಹೂವಿನ ಮೇಲೆ ಕುಳಿತುಕೊಳ್ಳುತ್ತಾಳೆ ಹಾಗೂ ಸಿಂಹ ಮೇಲೆ ಸವಾರಿ ಮಾಡುತ್ತಾಳೆ. ಅವಳು ಕೆಂಪು ಬಟ್ಟೆಗಳನ್ನು ಧರಿಸುತ್ತಾಳೆ ಮತ್ತು ನಾಲ್ಕು ಕೈಗಳನ್ನು ಹೊಂದಿದ್ದಾಳೆ.

ಸಿದ್ಧಿದಾತ್ರಿಯ ಅರ್ಥ – “ಸಿದ್ಧಿ” ಎಂದರೆ ಪರಿಪೂರ್ಣತೆ ಆದರೆ “ದಾತ್ರಿ” ಎಂದರೆ “ಕೊಡುವವಳು” ಆದ್ದರಿಂದ ಅವಳನ್ನು ಮಾತಾ ಸಿದ್ಧಿದಾತ್ರಿ ಎಂದು ಕರೆಯಲಾಗುತ್ತದೆ.

ಅವಳು ತನ್ನ ಭಕ್ತರಿಗೆ ಎಲ್ಲಾ ರೀತಿಯ ಸಿದ್ಧಿಗಳನ್ನು (ಪರಿಪೂರ್ಣತೆ) ನೀಡುತ್ತಾಳೆ. ಆದ್ದರಿಂದ ಅವಳನ್ನು ಸಿದ್ಧಿದಾತ್ರಿ ದೇವಿ ಎಂದು ಕರೆಯಲಾಗುತ್ತದೆ. ಸಿದ್ಧಿದಾತ್ರಿಯ ಇನ್ನೊಂದು ಹೆಸರು ಲಕ್ಷ್ಮಿ ದೇವಿ, ಅವಳು ಸಂಪತ್ತು, ಸಂತೋಷ ಮತ್ತು ಯಶಸ್ಸನ್ನು ಪ್ರತಿನಿಧಿಸುತ್ತಾಳೆ.

​ಸಿದ್ಧಿದಾತ್ರಿ ಪೂಜೆ ವಿಧಾನ

– ಸಿದ್ಧಿದಾತ್ರಿ ದೇವಿಯ ವಿಗ್ರಹದ ಮುಂದೆ ಕಲಶ ಸ್ಥಾಪನೆ ಮಾಡಿ.

– ದೇವಿಯ ಮೂರ್ತಿಯ ಹಣೆಯ ಮೇಲೆ ತಿಲಕವಿಡಿ.

– ದೀಪಗಳನ್ನು ಬೆಳಗಿಸಿ ಮತ್ತು ಮಲ್ಲಿಗೆ ಹೂವನ್ನು ದೇವಿಗೆ ಅರ್ಪಿಸಿ.

– ಸಿದ್ಧಿದಾತ್ರಿ ಮಂತ್ರಗಳನ್ನು ಪಠಿಸಿ ಮತ್ತು ನಿಮ್ಮ ಪ್ರಾರ್ಥನೆಯನ್ನು ಸ್ವೀಕರಿಸಲು ದೇವಿಯನ್ನು ಆಹ್ವಾನಿಸಿ.

– ಷೋಡಶೋಪಚಾರ ಪೂಜೆಯ ನಂತರ ಆರತಿ ಮಾಡಿ.

– ಇತರ ಭಕ್ತರಿಗೆ ಅಥವಾ ಕುಟುಂಬದ ಸದಸ್ಯರಿಗೆ ಪ್ರಸಾದವನ್ನು ನೀಡಿ.

– ಈ ದಿನ ಒಂಬತ್ತು ಹೂವುಗಳು, ಒಂಬತ್ತು ವಿವಿಧ ರೀತಿಯ ಹಣ್ಣುಗಳು, ಒಂಬತ್ತು ವಿವಿಧ ಒಣ ಹಣ್ಣುಗಳನ್ನು ಸಹ ನೀಡಲಾಗುತ್ತದೆ.

– ಸಾಮಾನ್ಯವಾಗಿ ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಒಂಬತ್ತು ಕನ್ಯಾ ಹುಡುಗಿಯರನ್ನು ಆಹ್ವಾನಿಸಲಾಗುತ್ತದೆ ಮತ್ತು ಅವರಿಗೆ ಆಹಾರ ಮತ್ತು ಉಡುಗೆ ಸಾಮಗ್ರಿಗಳನ್ನು ನೀಡಲಾಗುತ್ತದೆ. ಇದು ಕನ್ಯಾ ರೂಪದಲ್ಲಿ ದೇವಿಯನ್ನು ಪೂಜಿಸುವ ಸಂಕೇತವಾಗಿದೆ.

​ನವಮಿ ಹೋಮ

ನವಮಿ ತಿಥಿಯು ಸೂರ್ಯೋದಯದ ನಂತರ ಬಹಳ ಬೇಗ ಮುಗಿದರೆ ಅದು ಹಿಂದಿನ ದಿನ ಸಂಜೆಯ ಮೊದಲು ಪ್ರಾರಂಭವಾಗುತ್ತದೆ ಮತ್ತು ನವಮಿ ತಿಥಿಯ ಉತ್ತಮ ಭಾಗವು ಅಷ್ಟಮಿ ತಿಥಿಯಲ್ಲಿ ಮೇಲುಗೈ ಸಾಧಿಸುತ್ತದೆ. ಅದು ಸಂಭವಿಸಿದಲ್ಲಿ ನವಮಿ ಹೋಮವನ್ನು ಹಿಂದಿನ ದಿನದಂದು ಮಾಡಬಹುದು ಮತ್ತು ಅದನ್ನು ಧಾರ್ಮಿಕ ಗ್ರಂಥಗಳಲ್ಲಿ ಶುಭವೆಂದು ಪರಿಗಣಿಸಲಾಗುತ್ತದೆ. ಅಷ್ಟಮಿ ತಿಥಿಯಂದು ಹೋಮವನ್ನು ಅಷ್ಟಮಿ ತಿಥಿ ಚಾಲ್ತಿಯಲ್ಲಿರುವಾಗ ಯಾವುದೇ ಸಮಯದಲ್ಲಿ ಪ್ರಾರಂಭಿಸಬಹುದು ಮತ್ತು ನವಮಿ ತಿಥಿಯು ಪ್ರಚಲಿತವಾಗಲು ಪ್ರಾರಂಭಿಸಿದಾಗ ಮಾಡಬಹುದು. ಆದರೆ ಸೂರ್ಯಾಸ್ತದ ಮೊದಲು ಮುಗಿಸಬೇಕು. ಬೇರೆ ರೀತಿಯಲ್ಲಿ ಹೇಳುವುದಾದರೆ, ತಿಥಿಯು ಅಷ್ಟಮಿಯಿಂದ ನವಮಿಗೆ ದಾಟುವಾಗ ಹೋಮವನ್ನು ಮುಂದುವರೆಸಬೇಕು.

ಸಿದ್ಧಿದಾತ್ರಿ ದೇವಿಯನ್ನು ಕೇತು ಗ್ರಹವನ್ನು ಆಳುವ ದೇವತೆ ಎಂದು ಪರಿಗಣಿಸಲಾಗುತ್ತದೆ. ಸಿದ್ಧಿದಾತ್ರಿ ದೇವಿಯ ಪೂಜೆಯನ್ನು ಮಾಡುವುದರಿಂದ ಜಾತಕದಲ್ಲಿ ಕೇತುವಿನ ಕೆಟ್ಟ ಪರಿಣಾಮಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಕಾರಾತ್ಮಕ ಆಲೋಚನೆಗಳನ್ನು ಧನಾತ್ಮಕವಾಗಿ ಬದಲಿಸುವ ಶಕ್ತಿಯು ಆಕೆಗಿದೆ ಎನ್ನುವ ನಂಬಿಕೆಯಿದೆ. ಸಿದ್ಧಿದಾತ್ರಿಯ ಭಕ್ತರಾಗಿರುವುದರಿಂದ, ಒಬ್ಬರು ಆಂತರಿಕ ಶಾಂತಿ ಮತ್ತು ಆಧ್ಯಾತ್ಮಿಕ ಸಂತೋಷವನ್ನು ಪಡೆಯಬಹುದು. ಸಿದ್ಧಿದಾತ್ರಿಯ ಅನುಗ್ರಹದಿಂದ, ಒಬ್ಬರು ಚಿಂತೆ, ಆತಂಕ ಮತ್ತು ಭಯದಂತಹ ಜೀವನದ ಅಡೆತಡೆಗಳನ್ನು ಸಹ ತೊಡೆದುಹಾಕಬಹುದು. ಪ್ರಾಮಾಣಿಕವಾಗಿ ಪ್ರಾರ್ಥನೆ ಸಲ್ಲಿಸುವ ಭಕ್ತರು ಜೀವನದಲ್ಲಿ ಯಶಸ್ಸು, ಶಕ್ತಿ, ಬುದ್ಧಿವಂತಿಕೆ ಮತ್ತು ಜ್ಞಾನದಿಂದ ಆಶೀರ್ವದಿಸಲ್ಪಡುತ್ತಾರೆ.

​ಸಿದ್ಧಿದಾತ್ರಿ ಕಥೆ

ಹಿಂದೂ ಪುರಾಣಗಳ ಪ್ರಕಾರ, ಸಿದ್ಧಿದಾತ್ರಿಯು ತನ್ನ ಭಕ್ತರ ಪ್ರತಿಯೊಂದು ಆಸೆಯನ್ನು ಪೂರೈಸುವ ದೇವತೆ ಎಂದು ಕರೆಯಲಾಗುತ್ತದೆ. ಸಿದ್ಧಿಯು ‘ಬಯಕೆ’ಯನ್ನು ಸೂಚಿಸುತ್ತದೆ ಮತ್ತು ದಾತ್ರಿಯು ‘ಒದಗಿಸುವವಳು’ ಎಂಬುದನ್ನು ಸೂಚಿಸುತ್ತದೆ. ಈ ಎರಡು ಶಬ್ಧವನ್ನು ಸಂಯೋಜಿಸಿ ಸಿದ್ಧಿದಾತ್ರಿ ಎಂಬ ಪದವನ್ನು ರೂಪುಗೊಂಡಿದೆ. ಮಾತೆ ಸಿದ್ಧಿದಾತ್ರಿಯು ತನ್ನ ಆಶೀರ್ವಾದದ ರೂಪವಾಗಿ ಶಿವನಿಗೆ ಎಲ್ಲಾ ಸಿದ್ಧಿಗಳನ್ನು ನೀಡಿದಳು ಎಂದು ಪುರಾಣವು ತಿಳಿಸುತ್ತದೆ. ಭಗವಾನ್ ಶಿವನು ದೇವಿಯನ್ನು ಸಮರ್ಪಣೆಯೊಂದಿಗೆ ಪೂಜಿಸಿದನು, ಅವನ ದೇಹದ ಅರ್ಧಭಾಗವು ಶಕ್ತಿಯ ರೂಪದೊಂದಿಗೆ ಐಕ್ಯವಾಯಿತು. ಹೀಗಾಗಿ, ಶಿವನನ್ನು ಅರ್ಧನಾರೀಶ್ವರ ಎಂದೂ ಕರೆಯುತ್ತಾರೆ.

ನಾಲ್ಕು ಕೈಗಳನ್ನು ಹೊಂದಿರುವ ಕೆಂಪು ಸೀರೆಯನ್ನು ಧರಿಸಿರುವ ದೇವಿಯ ವಿಗ್ರಹವು ಕಮಲದ ಹೂವಿನ ಮೇಲೆ ಆರೋಹಿಸಲ್ಪಟ್ಟಿದೆ. ಅವಳು ಬಲಗೈಯಲ್ಲಿ ಗದಾ ಮತ್ತು ಚಕ್ರವನ್ನು ಹಿಡಿದಿದ್ದಾಳೆ, ಎಡಗೈಯು ಹೂವು ಮತ್ತು ಶಂಖವನ್ನು ಹಿಡಿದಿರುವುದು ಕಾಣುತ್ತದೆ. ಮಾ ಸಿದ್ಧಿದಾತ್ರಿಯನ್ನು ಅಷ್ಟ ಮಹಾ ಸಿದ್ಧಿಗಳ ಸೃಷ್ಟಿಕರ್ತೆ ಎಂದೂ ಕರೆಯಲಾಗುತ್ತದೆ. ಭಕ್ತರು ದುರ್ಗಾ ದೇವಿಯನ್ನು ಪರಿಪೂರ್ಣತೆ, ಶಕ್ತಿ ಮತ್ತು ವೈಭವವನ್ನು ಸಂಕೇತಿಸುತ್ತದೆ.

 

Content Credit:  vijaykarnataka.com

News & Events

Bride and Grooms

Looking for Bride or Groom?

- Please Call us @ 6362030905 for any queries -