ನವರಾತ್ರಿ 2022 ರ ಮೂರನೇ ದಿನದ ಪೂಜೆಯನ್ನು ಸೆಪ್ಟೆಂಬರ್ 28 ರಂದು ಆಚರಿಸಲಾಗುವುದು. ನವದುರ್ಗೆಯ ಮೂರನೇ ರೂಪವಾದ ಚಂದ್ರಘಂಟಾ ದೇವಿಯನ್ನು ಈ ದಿನ ಪೂಜಿಸಲಾಗುತ್ತದೆ. ಶಿವನನ್ನು ವಿವಾಹವಾದ ಬಳಿಕ ಹಣೆಯ ಮೇಲೆ ಅರ್ಧಚಂದ್ರಾಕಾರದಲ್ಲಿ ಸಿಂಧೂರವನ್ನಿಡಲು ಆರಂಭಿಸುತ್ತಾಳೆ. ಆದ್ದರಿಂದ ಈಕೆಯನ್ನು ಚಂದ್ರಘಂಟಾ ದೇವಿಯೆಂದು ಕರೆಯಲಾಗುತ್ತದೆ. ನವರಾತ್ರಿ ಹಬ್ಬದ ಮೂರನೇ ದಿನ ಚಂದ್ರಘಂಟಾ ದೇವಿಯನ್ನು ಪೂಜಿಸುವುದು ಹೇಗೆ..? ಯಾವ ಮಂತ್ರವನ್ನು ಪಠಿಸಬೇಕು..? ಚಂದ್ರಘಂಟಾ ದೇವಿಯ ಕುರಿತು ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಹೀಗಿದೆ.

ಧಾರ್ಮಿಕ ಗ್ರಂಥಗಳ ಪ್ರಕಾರ, ದುರ್ಗಾ ದೇವಿಯು ರಾಕ್ಷಸರ ಸಂಹಾರಕ್ಕಾಗಿ ಚಂದ್ರಘಂಟಾ ರೂಪವನ್ನು ಧರಿಸಿದಳು. ಇವುಗಳಲ್ಲಿ ಮೂರು ದೇವರುಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಶಕ್ತಿಗಳು ಸೇರಿವೆ. ಕೈಯಲ್ಲಿ ಖಡ್ಗ, ತ್ರಿಶೂಲ, ಬಿಲ್ಲು ಮತ್ತು ಗದೆಯನ್ನು ಹಿಡಿದಿರುತ್ತಾಳೆ. ಅವಳ ಹಣೆಯ ಮೇಲೆ ಅರ್ಧಚಂದ್ರನು ಗಂಟೆಯ ಆಕಾರದಲ್ಲಿ ಕುಳಿತುಕೊಂಡಿರುತ್ತಾನೆ. ಆದ್ದರಿಂದ ಅವಳನ್ನು ಚಂದ್ರಘಂಟಾ ಎಂದು ಕರೆಯುತ್ತಾರೆ. ಭಕ್ತರಿಗೆ, ತಾಯಿಯ ಈ ರೂಪವು ಶಾಂತ ಮತ್ತು ಕರುಣೆಯ ರೂಪವಾಗಿದೆ.
ಚಂದ್ರಘಂಟಾ ದೇವಿ ಪೂಜೆ ವಿಧಾನ
ನವರಾತ್ರಿಯ ಮೂರನೇ ದಿನ, ಬೆಳಿಗ್ಗೆ ಎದ್ದು ಸ್ನಾನ ಮಾಡಿದ ನಂತರ, ಪೂಜಾ ಸ್ಥಳದಲ್ಲಿ ಗಂಗಾಜಲವನ್ನು ಸಿಂಪಡಿಸಿ. ನಂತರ ತಾಯಿ ಚಂದ್ರಘಂಟಾಳನ್ನು ಧ್ಯಾನಿಸಿ ಅವಳ ಮುಂದೆ ದೀಪವನ್ನು ಬೆಳಗಿಸಿ. ಇದರ ಬಳಿಕ ಚಂದ್ರಘಂಟಾ ಅಥವಾ ದುರ್ಗಾ ದೇವಿಗೆ ಅಕ್ಷತೆ, ಸಿಂಧೂರ, ಹೂವು ಮುಂತಾದ ವಸ್ತುಗಳನ್ನು ಅರ್ಪಿಸಿ. ಇದರ ನಂತರ, ತಾಯಿಗೆ ಹಣ್ಣುಗಳು ಮತ್ತು ಕೇಸರಿ-ಹಾಲಿನಿಂದ ತಯಾರಿಸಿದ ಸಿಹಿತಿಂಡಿಗಳು ಅಥವಾ ಖೀರ್ ಅನ್ನು ಪ್ರಸಾದವಾಗಿ ಅರ್ಪಿಸಿ. ನಂತರ ಚಂದ್ರಘಂಟಾ ದೇವಿಗೆ ಆರತಿಯನ್ನು ಮಾಡಿ. ಪೂಜೆಯ ನಂತರ, ತಿಳಿದೋ ತಿಳಿಯದೆಯೋ ತಪ್ಪಾಗಿದ್ದರೆ ಮನ್ನಿಸುವಂತೆ ಪ್ರಾರ್ಥಿಸಿ.
ನವರಾತ್ರಿ ಹಬ್ಬದ ಮೂರನೇ ದಿನ ಚಂದ್ರಘಂಟಾ ದೇವಿಯ ಪೂಜೆಯ ಸಮಯದಲ್ಲಿ ಬಿಳಿ, ಕಂದು ಅಥವಾ ಚಿನ್ನದ ಬಣ್ಣದ ಬಟ್ಟೆಗಳನ್ನು ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದರೊಂದಿಗೆ ಭಕ್ತರು ಈ ದಿನ ಹಾಲಿನಿಂದ ಮಾಡಿದ ಸಿಹಿತಿಂಡಿಗಳನ್ನು ಅರ್ಪಿಸಬಹುದು. ಜೇನುತುಪ್ಪ ಕೂಡ ತಾಯಿಗೆ ಪ್ರಿಯವಾಗಿದೆ ಎಂದು ನಂಬಲಾಗಿದೆ. ಹಾಗೂ ಹಣ್ಣುಗಳು ಮತ್ತು ಸಿಹಿತಿಂಡಿಯನ್ನೂ ಅರ್ಪಿಸಬಹುದು.
ಪೂಜೆಯ ಪ್ರಾಮುಖ್ಯತೆ
ಚಂದ್ರಘಂಟಾ ದೇವಿಯನ್ನು ಆರಾಧಿಸುವುದರಿಂದ ಸಾಧಕನ ಎಲ್ಲಾ ದುಃಖ ಮತ್ತು ನೋವುಗಳು ದೂರವಾಗುತ್ತವೆ ಮತ್ತು ಅವನು ನಿರ್ಭೀತ ಮತ್ತು ಧೈರ್ಯಶಾಲಿಯಾಗುತ್ತಾನೆ. ದೇವಿಯ ಆರಾಧನೆಯು ವ್ಯಕ್ತಿಯ ಮುಖ, ಕಣ್ಣು ಮತ್ತು ದೇಹದಲ್ಲಿ ಧನಾತ್ಮಕ ಬೆಳವಣಿಗೆಗೆ ಕಾರಣವಾಗುತ್ತದೆ. ಇದರೊಂದಿಗೆ ಬುದ್ಧಿ ಮತ್ತು ಜ್ಞಾನವೂ ಹೆಚ್ಚುತ್ತದೆ.
ಚಂದ್ರಘಂಟಾ ದೇವಿಯ ಕಥೆ

ಹೊಸದಾಗಿ ವಿವಾಹವಾದ ಸ್ವರೂಪವನ್ನು ದುರ್ಗಾಮಾತೆಯು ಚಂದ್ರಘಂಟಾ ರೂಪದಲ್ಲಿ ತೋರಿಸಿದ್ದಾರೆ. ಹಿಮವಂತ ಹಾಗೂ ಮೈನಾ ದೇವಿಯ ಪುತ್ರಿಯಾಗಿ ಜನಿಸಿದ ಪಾರ್ವತಿಯು ಶಿವನನ್ನು ಪಡೆಯಲು ಕಠಿಣ ತಪಸ್ಸನ್ನು ಕೈಗೊಳ್ಳುತ್ತಾಳೆ. ಪಾರ್ವತಿಯ ಕಠೋರ ತಪಸ್ಸನ್ನು ಮೆಚ್ಚಿದ ಶಿವನು ಮದುವೆಯಾಗಲು ಒಪ್ಪಿಕೊಳ್ಳುತ್ತಾನೆ. ಇದರಂತೆ ಹಿಮವಾನನ ಅರಮನೆಯಲ್ಲಿ ಮದುವೆಯ ಏರ್ಪಾಡುಗಳು ನಡೆಯುತ್ತದೆ.
ಸ್ಮಶಾನವಾಸಿಯಾದ ಶಿವನು ತನ್ನ ಭಯಾನಕ ರೂಪದಲ್ಲೇ, ತನ್ನ ಗಣಗಳೊಂದಿಗೆ ಮೆರವಣಿಗೆಯಲ್ಲಿ ಅರಮನೆಯನ್ನು ತಲುಪುತ್ತಾನೆ. ಬೂದಿಯಿಂದ ಮುಚ್ಚಲ್ಪಟ್ಟ ಶರೀರ, ಕೊರಳಿನಲ್ಲಿ ಸುತ್ತಿದ ಹಾವುಗಳು, ಗಂಟಿನಂತಿರುವ ಜಟೆಧಾರಿಯಾದ ಶಿವ, ಅವನೊಂದಿಗೆ ದೆವ್ವಗಳು, ಪಿಶಾಚ, ಗಣಗಳು, ಋಷಿಮುನಿಗಳು, ಅಘೋರಿಗಳನ್ನು ಒಳಗೊಂಡ ವಿಚಿತ್ರ ಮೆರವಣಿಗೆಯನ್ನು ನೋಡಿ, ಪಾರ್ವತಿಯ ತಾಯಿ ಮೂರ್ಛೆ ಹೋಗುತ್ತಾಳೆ. ವಿವಾಹಕ್ಕೆಂದು ಸೇರಿದ್ದವರು ಶಿವನ ರೂಪ, ಅವನ ಗಣಗಳನ್ನು ನೋಡಿ ಆಘಾತವನ್ನು ಅನುಭವಿಸುತ್ತಾರೆ. ಇದನ್ನು ಕಂಡ ಪಾರ್ವತಿಯು ಶಿವನಿಗೆ ಮುಜುಗರವಾಗದಿರಲೆಂದು ಭಯಾನಕ ರೂಪವಾಗಿ ಚಂದ್ರಘಂಟೆಯಾಗಿ ಪರಿವರ್ತನೆಯಾಗುತ್ತಾಳೆ.
ಚಿನ್ನದ ಮೈಬಣ್ಣವನ್ನು ಹೊಂದಿದ ಚಂದ್ರ ಘಂಟೆಯು ಹತ್ತು ತೋಳುಗಳನ್ನು ಹೊಂದಿದ್ದಳು. ಒಂಭತ್ತು ತೋಳುಗಳಲ್ಲಿ ತ್ರಿಶೂಲ, ಗದೆ, ಬಿಲ್ಲು-ಬಾಣ, ಖಡ್ಗ, ಕಮಲ, ಘಂಟೆ, ಕಮಂಡಲ ಹಾಗೂ ಒಂದು ತೋಳಿನಲ್ಲಿ ಅಭಯ ಮುದ್ರೆಯಿಂದ, ಸಿಂಹವಾಹಿನಿಯಾಗಿ ರೂಪ ತಾಳುತ್ತಾಳೆ. ತನ್ನ ಭಕ್ತರಿಗೆ ತಾಯಿಯಂತೆ ಆದಿಶಕ್ತಿಯು ಸಹಾನುಭೂತಿಯನ್ನು ತೋರುತ್ತಾಳೆ. ಹಾಗೂ ಕೆಟ್ಟವರಿಗೆ ಭಯಾನಕ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ.
ಚಂದ್ರಘಂಟೆಯ ರೂಪತಾಳಿದ ಪಾರ್ವತಿಯು ಶಿವನಿಗೆ ಸುಂದರವಾದ ವರನ ರೂಪವನ್ನು ತಾಳಲು ಭಿನ್ನವಿಸುತ್ತಾಳೆ. ಪಾರ್ವತಿಯ ಮಾತಿಗೆ ಒಪ್ಪಿದ ಶಿವನು ಸುಂದರ ರೂಪತಾಳಿ, ಆಭರಣಗಳಿಂದ ಅಲಂಕೃತನಾಗಿ ಕಾಣಿಸಿಕೊಳ್ಳುತ್ತಾನೆ. ಶಿವ ಹಾಗೂ ಪಾರ್ವತಿಯ ವಿವಾಹವು ಸಾಂಗವಾಗಿ ನೆರವೇರುತ್ತದೆ. ಹೀಗೆ ಶಿವ ಹಾಗೂ ಪಾರ್ವತಿಯು ವಿವಾಹವಾದ ದಿನವನ್ನು ಪ್ರತಿವರ್ಷ ಮಹಾಶಿವರಾತ್ರಿಯೆಂದು ಆಚರಿಸಲಾಗುತ್ತದೆ.
ಚಂದ್ರಘಂಟಾ ದೇವಿಯ ಮಂತ್ರ
– ”ಪಿಂಡಜ ಪ್ರವರಾರೂಡ ಚಂಡಕೋಪಾಸ್ತ್ರಕೈರ್ಯುತಾ
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ”
– ”ಓಂ ದೇವಿ ಚಂದ್ರಘಂಟಾಯೈ ನಮಃ”
– ”ಏಂ ಶ್ರೀಂ ಶಕ್ತಾಯೈ ನಮಃ”
– ”ಯಾ ದೇವೀ ಸರ್ವಭೂತೇಷು ಮಾಂ ಚಂದ್ರಘಂಟಾ ರೂಪೇಣ ಸಂಸ್ಥಿತಾ
ನಮಸ್ತಸ್ಯ ನಮಸ್ತಸ್ಯ ನಮಸ್ತಸ್ಯ ನಮೋ ನಮಃ”
– ”ಆಹ್ಲಾದಕಾರಿಣಿ ಚಂದ್ರಭೂಷಣಾ ಹಸ್ತೇ ಪದ್ಮಧಾರಿಣೀ
ಘಂಟಾ ಶೂಲ ಹಲಾನೀ ದೇವೀ ದುಷ್ಟ ಭಾವ ವಿನಾಶಿನೀ”.
Content Credit: Vijaykarnataka





